Wednesday, April 20, 2016

ಹ್ಯಾಲಿ ಧೂಮಕೇತು

ಧೂಮಕೇತು ಎಂದಾಗ ಮೊದಲಿಗೆ ನೆನಪಾಗುವುದು ಹ್ಯಾಲಿ ಧೂಮಕೇತು. ಹ್ಯಾಲಿ ಧೂಮಕೇತುವಿನ ವೈಜ್ಞಾನಿಕ ಹೆಸರು ೧ಪಿ/ಹ್ಯಾಲಿ. ಹೆಸರೇ ಹೇಳುವಂತೆ ಇದು ಮೊಟ್ಟ ಮೊದಲನೆಯ periodic ಧೂಮಕೇತು. ಈ ಧೂಮಕೇತುವಿನ ಅನ್ವೇಷಣೆಯ ಹಿಂದೆ ಒಂದು ಸ್ವಾರಸ್ಯಕಾರಿ ಕಥೆ ಇದೆ. 
ಹದಿನೇಳನೇ ಶತಮಾನದವರೆಗೂ ನಮಗೆ ಧೂಮಕೇತುಗಳ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ. ಧೂಮಕೇತುಗಳು ವಿನಾಶದ ಮುನ್ಸೂಚನೆ ಎಂದೇ ಜನರ ಭಾವನೆಯಾಗಿತ್ತು. ಶೇಕ್ಸ್ ಪಿಯರ್ ಒಂದು ನಾಟಕದಲ್ಲಿ ಹೀಗೆ ಹೇಳಿದ್ದ "When beggars die there are no comets seen; The heavens themselves blaze forth the death of princes".
ಈ ಸಮಯದಲ್ಲಿ ಎಡ್ಮಂಡ್ ಹ್ಯಾಲಿ, ಹಿಂದೆ ಕಂಡಿದ್ದ ಧೂಮಕೇತುಗಳ ಬಗ್ಗೆ ಅಧ್ಯಯನ ಮಾಡಲಾರಂಭಿಸಿದ. ಸುಮಾರು ಮೂರು ಶತಮಾನಗಳಲ್ಲಿ ಕಂಡಿದ್ದ ೨೪ ಧೂಮಕೇತುಗಳ ಬಗ್ಗೆ ಅಧ್ಯಯನ ನಡೆಸಿದಾಗ ಅವನಿಗೆ ಕುತೂಹಲ ಮೂಡಿಸಿದ್ದು ೧೫೩೧, ೧೬೦೭, ೧೬೮೨ರಲ್ಲಿ ಕಂಡಿದ್ದ ಮೂರು ಧೂಮಕೇತುಗಳು. ಈ ಮೂರರ ಪಥ ಒಂದೇ ಇದ್ದು ಇನ್ನೂ ಅನೇಕ ಗುಣಗಳು ತಾಳೆಯಾಗುತ್ತಿದ್ದವು. ಆಗ ಹ್ಯಾಲಿ ಈ ಮೂರೂ ಧೂಮಕೇತುಗಳೂ ಒಂದೇ. ಈ ಧೂಮಕೇತು ೭೬ ವರ್ಷಗಳಿಗೆ ಒಮ್ಮೆ ಸೂರ್ಯನ ಬಳಿ ಬರುತ್ತದೆ, ೧೭೫೮ರಲ್ಲಿ ಈ ಧೂಮಕೇತು ಮತ್ತೆ ಬರಲಿದೆ ಎಂದು ಭವಿಷ್ಯ ನುಡಿದ. ಅವನು ಹೇಳಿದಂತೆ ಧೂಮಕೇತು ಮತ್ತೆ ಕಾಣಿಸಿತು. ಆದರೆ ಇದಕ್ಕೆ ೧೬ ವರ್ಷ ಮೊದಲೇ ಹ್ಯಾಲಿ ತೀರಿಹೋಗಿದ್ದ. ವಿಜ್ಞಾನಿಗಳು ಈ ಧೂಮಕೇತುವಿಗೆ ಹ್ಯಾಲಿ ಧೂಮಕೇತು ಎಂದೇ ನಾಮಕರಣ ಮಾಡಿದರು. 
ಹ್ಯಾಲಿ ಧೂಮಕೇತುವಿನ ಇನ್ನೊಂದು ಸ್ವಾರಸ್ಯಕರ ಘಟನೆ ಹೀಗಿದೆ. ೧೯೦೯ರಲ್ಲಿ ಖ್ಯಾತ ಕವಿ ಮಾರ್ಕ್ ಟ್ವೇನ್ ಹೀಗೆ ಹೇಳಿದ "I came in with Halley's Comet in 1835. It is coming again next year, and I expect to go out with it".
೧೯೧೦ರಲ್ಲಿ ಹ್ಯಾಲಿ ಧೂಮಕೇತು ಸೂರ್ಯನ ಅತಿ ಸಮೀಪದಲ್ಲಿ ಹಾದುಹೋಗಿ ಮತ್ತೆ ಕಾಣಿಸಿದ ದಿನವೇ ಮಾರ್ಕ್ ಟ್ವೇನ್ ತೀರಿಹೋದ.
೧೯೧೦ರ ವೇಳೆಗಾಗಲೇ ವಿಜ್ಞಾನ ತುಂಬಾ ಮುಂದುವರೆದಿತ್ತು. ಆಕಾಶ ಕಾಯಗಳ ಬೆಳಕಿನಲ್ಲಿರುವ ಬಣ್ಣಗಳನ್ನು ಪರಿಶೀಲಿಸಿ ಅದರ ಸಂಯೋಜನೆಯನ್ನು ತಿಳಿಯುವ "ಸ್ಪೆಕ್ಟ್ರೋಸ್ಕೊಪಿ" ಎಂಬ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿತ್ತು. ಹ್ಯಾಲಿ ಧೂಮಕೇತುವನ್ನು ಸ್ಪೆಕ್ಟ್ರೋಸ್ಕೊಪಿಗೆ ಒಳಪಡಿಸಿದಾಗ ಅದರಲ್ಲಿ ಸಯನೈಡ್ ಅನಿಲ ಇರುವುದು ಪತ್ತೆಯಾಯಿತು. ಅದೇ ಸಮಯಕ್ಕೆ ಖಗೋಳ ತಜ್ಞರು ಭೂಮಿ ಹ್ಯಾಲಿ ಧೂಮಕೇತುವಿನ ಬಾಲದ ಮೂಲಕ ಹಾದುಹೋಗುವುದೆಂದು ಪತ್ತೆ  ಮಾಡಿದರು. ಜನರನ್ನು ಭಯ ಪಡಿಸಲು ಇಷ್ಟು ಸಾಕಾಯ್ತು. ವಿಜ್ಞಾನಿಗಳು ಇದರಿಂದ ಯಾವುದೇ ಹಾನಿಯಿಲ್ಲವೆಂದು ಬಾರಿ ಬಾರಿ ಹೇಳಿದರೂ ಪತ್ರಿಕೆಗಳು "ಸಯನೈಡ್ ನಿಂದ ಜೀವ ಸಂಕುಲ ನಾಶವಾಗಲಿದೆ" ಎಂದು ಸುದ್ದಿ ಮಾಡಿದವು, ಜನ ಸಯನೈಡ್ ನಿಂದ ಉಳಿಯಲು "ವಿಶಿಷ್ಟ ಮುಖವಾಡ" ಧರಿಸಿ, "ಆಂಟಿ ಸಯನೈಡ್ ಮಾತ್ರೆ"ಗಳನ್ನು ನುಂಗಿದರು. 
ಮೇ ೧೯, ೨೦೧೦ರಂದು ಭೂಮಿ ಹ್ಯಾಲಿ ಧೂಮಕೇತುವಿನ ಬಾಲದ ಮೂಲಕ ಹಾದುಹೋಯಿತು. ೮ ಗಂಟೆಗಳ ಕಾಲ ಜನ ಉಸಿರು ಬಿಗಿಹಿಡಿದು ಕಾದರು. ಯಾರೂ ಸಾಯಲಿಲ್ಲ. ಯಾರ ಆರೋಗ್ಯವೂ ಕೆಡಲಿಲ್ಲ. ಆದರೆ ಮಾತ್ರೆ, ಮುಖವಾಡಗಳನ್ನು ಮಾರಿದವರು ಮಾತ್ರ ಶ್ರೀಮಂತರಾದರು. 

No comments:

Post a Comment